ಯಕ್ಷ ನಂದನದ ಇಂಗ್ಲಿಷ್ ದೇವೀ ಮಹಾತ್ಮೆ
ಲೇಖಕರು : ಉದಯವಾಣಿ
ಶನಿವಾರ, ಸೆಪ್ಟೆ೦ಬರ್ 7 , 2013
|
ಕೀರ್ತಿಶೇಷ ಪಿ.ವಿ. ಐತಾಳರು ಆರಂಭಿಸಿದ ಆಂಗ್ಲ ಭಾಷಾ ಸಂಭಾಷಣೆಯ ತಂಡ "ಯಕ್ಷನಂದನ' ಇತ್ತೀಚೆಗೆ ತನ್ನ ಸಂಸ್ಥಾಪಕರ ಸಂಸ್ಮರಣೆಯನ್ನು ಮಂಗಳೂರಿನ ಪುರಭವನದಲ್ಲಿ ನಡೆಸಿತು. ಶ್ರೀದೇವಿ ಮಹಾತ್ಮೆ ಆಟವನ್ನು ಎಂಟೂವರೆ ತಾಸುಗಳ ಕಾಲ (ಅಂದರೆ ಪೂರ್ಣ ರಾತ್ರಿ) ನಡೆಸಿದ್ದು ಈಗ ಇತಿಹಾಸ. ಪಿ.ವಿ. ಐತಾಳರು ಸ್ವರ್ಗಸ್ಥರಾದ ಮೇಲೆ ಪ್ರತೀ ವರ್ಷವೂ ನಡೆಯುವಂತೆ 16ನೇ ವರ್ಷದ ಅವರ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಈ ಯಕ್ಷಗಾನವನ್ನು ಏರ್ಪಡಿಸಲಾಗಿತ್ತು.
ಎಂ.ಎಲ್. ಸಾಮಗರು ಮಹಾವಿಷ್ಣು ಮತ್ತು ರಕ್ತಬೀಜನ ಪಾತ್ರವನ್ನು ನಿರ್ವಹಿಸಿದರು. ತಮ್ಮ ನಾಟ್ಯದ ಚುರುಕುತನದಿಂದ, ಮಾತುಗಾರಿಕೆಯ ಸೊಬಗಿನಿಂದ ಪ್ರಸಂಗದ ಎರಡೂ ಪಾತ್ರಗಳನ್ನೂ ಗೆಲ್ಲಿಸಿಕೊಟ್ಟರು. ಸರ್ಪಂಗಳ ಈಶ್ವರ ಭಟ್ಟರು ಬ್ರಹ್ಮ ಮತ್ತು ಸುಗ್ರೀವನ ಪಾತ್ರದಲ್ಲಿ ಚೆನ್ನಾಗಿ ಅಭಿನಯಿಸಿ ಕಥೆಗೆ ಮೆರುಗು ತುಂಬಿದರು. ಸ್ತ್ರೀ ವೇಷಧಾರಿ ರವಿ ಅಲೆವೂರಾಯ ವರ್ಕಾಡಿಯವರು ಮಾಲಿನಿ ಮತ್ತು ಶ್ರೀದೇವಿಯ ಪಾತ್ರಗಳನ್ನು ನಿರ್ವಹಿಸಿ, ಎಲ್ಲಾ ಭಾಷೆಗಳಲ್ಲೂ ಮಿಂಚಬಲ್ಲ ಕಲಾವಿದ ತಾನೆಂಬುದನ್ನು ಶ್ರುತಪಡಿಸಿದರು. ಈಶ್ವರ, ಸುಪಾರ್ಶ್ವಕ ಮತ್ತು ಮಹಾಕಾಳಿಯ ಪಾತ್ರವನ್ನು ಕು| ವೃಂದಾ ಕೊನ್ನಾರ್ ನಿರ್ವಹಿಸಿ ತನಗೆ ದೊರೆತ ಅಲ್ಪ ಸಮಯದಲ್ಲಿ ಮಿಂಚಿದರು.
ಸಂಚಾಲಕ ಪಿ. ಸಂತೋಷ್ ಐತಾಳ ಕಾರ್ಯಕ್ರಮದ ಪೂರ್ಣ ಹೊಣೆ ಹೊತ್ತು ಇಂತಹ ಸುಂದರ ಕಾರ್ಯಕ್ರಮ ನೀಡು ವಲ್ಲಿ ಓರ್ವ ಯೋಗ್ಯ ಮತ್ತು ಉತ್ತಮ ಸಂಘಟಕನನ್ನು ಬಿಂಬಿಸಿದರು ಎಂಬುದರಲ್ಲಿ ಎರಡು ಮಾತಿಲ್ಲ. ಮಹಿಷಾಸುರನಾಗಿ ಅವರು ವಿಜೃಂಭಿಸಿದ ರೀತಿಯೂ ಅನನ್ಯ ವಾಗಿತ್ತು. ಅನಂತರ ಶಾಂಭವಿ ವಿಜಯದ ರಕ್ತೇಶ್ವರಿಯ ಪಾತ್ರಿಯ ಪಾತ್ರವನ್ನು ಅವರೇ ನಿರ್ವಹಿಸಿ ಸಭಿಕರನ್ನು ಸಂತೋಷದ ಕಡಲಲ್ಲಿ ತೇಲಿಸಿದರು.
ಪಾತ್ರ ನಿರ್ವಹಣೆ, ಸಭಾ ನಿರ್ವಹಣೆಗಳೆರಡನ್ನೂ ಸಮತೋಲಿತವಾಗಿ ನಡೆಸಿದ ಸಂತೋಷ್ ಐತಾಳರು ಯಕ್ಷನಂದನ ಆಂಗ್ಲ ಭಾಷಾ ತಂಡಕ್ಕೆ ಪೂರ್ಣ ರಾತ್ರಿಯ ಆಟದ ಮುನ್ನುಡಿ ಬರೆದರು. ಇದು ತನಕ 5 ಗಂಟೆಯ ಅವಧಿಯ ಕಾರ್ಯಕ್ರಮ ಮಾತ್ರ ನೀಡಿದ್ದ ತಂಡ 8 ಗಂಟೆಗೂ ಮಿಕ್ಕಿ ಕಾಯಕ್ರಮ ನೀಡಿದುದು ಹೆಮ್ಮೆಯ ವಿಚಾರ.
ನಾಗೇಶ ಕಾರಂತರು ಹಾಗೂ ಡಾ| ಪಿ. ಸತ್ಯಮೂರ್ತಿ ಐತಾಳರು ಮಧು, ಕೈಟಭರಾಗಿ ಕಾಣಿಸಿಕೊಂಡರು. ಸೌಜನ್ಯಾ ಅವರ ಮಹಿಷಾಸುರ ಯಶಸ್ಸನ್ನು ಕಂಡಿತು. ಅಬ್ಬರದ ಪ್ರವೇಶ, ಸಭೆಯಲ್ಲಿ ದೊಂದಿ, ರಾಳದೊಂದಿಗೆ ಪುರುಷರಿಗೆ ಸಮದಂಡಿಯಾಗಿ ಮಹಿಷನನ್ನು ಮೆರೆಸಿದ ಸೌಜನ್ಯಾ ಅಭಿನಂದನಾರ್ಹರು.
ಶಂಖಾಸುರ, ದುರ್ಗಾಸುರ ಮತ್ತು ಬಿಡಲಾಸುರರಾಗಿ ಧೀರಜ್ ಕೊಟ್ಟಾರಿ, ಶಿವತೇಜ ಐತಾಳ ಮತ್ತು ಶ್ರೀಜಿತ್, ದೇವೇಂದ್ರನಾಗಿ ಮನೋಹರ ಮಯ್ಯ, ಅಗ್ನಿ, ವರುಣ, ವಾಯು, ಕುಬೇರರಾಗಿ ವೈಭವ ಕಿನ್ಯ, ಮಯೂರ್, ಅನನ್ಯ ಐತಾಳ್, ಸ್ಕಂದ ಕೊನ್ನಾರ್, ವಿದ್ಯುನ್ಮಾಲಿ ಹಾಗೂ ದೂತನಾಗಿ ಶರಶ್ಚಂದ್ರ, ಚಂದ್ರ ಕಾರಂತರು ಕಾಣಿಸಿಕೊಂಡರು. ಯಕ್ಷನಾಗಿ ಗೌತಮ್ ಡಿ.ಕೆ. ಚೊಕ್ಕದಾಗಿ ನಿರ್ವಹಿಸಿ ಸೈ ಎನಿಸಿಕೊಂಡರು. ಆರಂಭದಲ್ಲಿ ವಾಣಿ ಎಸ್. ಐತಾಳ್ ಆದಿಮಾಯೆಯಾಗಿ ರಂಜಿಸಿದರು.
ಪಿ.ವಿ. ಐತಾಳರ ಸಂಸ್ಮರಣೆಯೊಂದಿಗೆ ಸಭಾ ಕಾರ್ಯಕ್ರಮದ ಬಳಿಕ " ಶಾಂಭವಿ ವಿಜಯ' ನಡೆಯಿತು. ಶುಂಭಾಸುರ, ನಿಶುಂಭಾಸುರರಾಗಿ ಶರಶ್ಚಂದ್ರ ಹಾಗೂ ಶಂಕರ ಆರಿಗರು ಮೆರೆದಿದ್ದರು. ಚಂಡ ಮುಂಡರ ಪಾತ್ರಧಾರಿಗಳಾಗಿ ಕು| ಶಿವಾನಿ, ಛಾಯಾಲಕ್ಷ್ಮೀಯವರು ನಿರ್ವಹಿಸಿದರೆ ಧೂಮ್ರಾಕ್ಷನಾಗಿ ಡಾ| ಪಿ. ಸತ್ಯಮೂರ್ತಿ ಐತಾಳರು ಪಾತ್ರ ನಿರ್ವಹಿಸಿದರು. ದಿಲೀಪ್ ಸುವರ್ಣ ರಕ್ತೇಶ್ವರಿಯಾಗಿ ಕಾಣಿಸಿಕೊಂಡರು.
ಈ ಯಕ್ಷಗಾನದ ಯಶಸ್ಸಿಗೆ ಹೊಸ ಮೂಲೆ ಗಣೇಶ ಭಟ್ಟರ ಹಾಡುಗಾರಿಕೆ, ಪದ್ಯಾಣ ಶಂಕರ ನಾರಾಯಣ ಭಟ್ಟರ ಮದ್ದಳೆ ವಾದನವೂ ಕಾರಣ. ಕೃಷ್ಣಯ್ಯ ಆಚಾರ್ಯ ಮತ್ತು ದಿವಾಣ ಶಂಕರ ಭಟ್ಟರೂ ಸಹಕರಿಸಿದರು.
ಕೃಪೆ : http://www.udayavani.com
|
|
|